By Balu Deraje
ಭಾರತದ ಪ್ರಾಚೀನ ಹಿಂದು ಧರ್ಮದ ಸಾಹಿತ್ಯ ಎಂದರೆ ವೇದಗಳು ಎಂದು ಪರಿಗಣಿಸಲಾಗಿದೆ. ಇದು ಸಂಸ್ಕೃತ ದಲ್ಲಿ ರಚಿಸಲ್ಪಟ್ಟಿದೆ. ಈ ವೇದಗಳನ್ನು ವ್ಯಾಸ ಮಹರ್ಷಿಗಳು ಪಠ್ಯ ರೂಪದಲ್ಲಿ 4 ವಿಭಾಗಗಳಾಗಿ ವಿಂಗಡಿಸಿ ಇವರ ನಾಲ್ಕು ಶಿಷ್ಯರಾದವರು 1: ಋಗ್ವೇದವನ್ನು ಪೈಲ ಮಹರ್ಷಿ, 2: ಯಜುರ್ವೇದ ವನ್ನು ವೈಶಂಪಾಯನ ಮಹರ್ಷಿ, 3:ಸಾಮವೇದ ವನ್ನು ಜೈಮಿನಿ ಮಹರ್ಷಿ, 4: ಅಥರ್ವಣ ವೇದವನ್ನು ಸುಮಂತ ಮಹರ್ಷಿ ಗಳು ಪ್ರಚಾರ ಮಾಡಿದರು. ನಂತರ ಗುರುಕುಲ ಪದ್ದತಿಯು ಆರಂಭಗೊಂಡಿತು ಎಂದು ಉಲ್ಲೇಖವಿದೆ..
ನಾಡಿನ ಹಲವಾರು ಕಡೆಗಳಲ್ಲಿ ವೇದಪಾಠಶಾಲೆಗಳನ್ನು ಕಾಣಬಹುದಾಗಿದೆ. ತಾಲ್ಲೂಕು ಸುಳ್ಯದಿಂದ ಸುಮಾರು 3 ಕಿಮೀ ದೂರದಲ್ಲಿರುವ ಪಯಸ್ವಿನಿ ನದಿಯ ತೀರದಲ್ಲಿರುವ ಅರಂಬೂರು ಪ್ರದೇಶ. ಇಲ್ಲಿರುವುದು ವಿಶ್ವವಿಖ್ಯಾತ ಪಡೆದ ತೂಗುಸೇತುವೆಯ ನಿರ್ಮಾಣ ಮಾಡಿದ ಶ್ರೀ ಗಿರೀಶ್ ಭಾರದ್ವಾಜರ ಹಲವಾರು ಎಕರೆ ಜಾಗದಲ್ಲಿರುವ ವಿಶಾಲವಾದ ಮನೆ.
ಮನೆಯ ಪಕ್ಕದಲ್ಲೇ ಹಳೆಯ ಕಟ್ಟಡದಲ್ಲಿ ಹಿಂದಿನ ವರ್ಷಗಳಲ್ಲಿ ವೇದ ಪಾಠಶಾಲೆ ನಡೆಯುತ್ತಿದ್ದು, ನಂತರ ಇದರ ಜೀರ್ಣೋದ್ಧಾರ ಕಾರ್ಯವಾಗಿ ಇದರ ಪಕ್ಕದ ಕಟ್ಟಡದಲ್ಲಿ ಕಂಚಿಯ ಶ್ರೀ ಶಂಕರಾಚಾರ್ಯ ಪೀಠದ ಜಗದ್ಗುರುಗಳಾದ ಶ್ರೀ ಜಯೇಂದ್ರ ಸರಸ್ವತಿ ಮಹಾ ಸ್ವಾಮಿಗಳ ಬೆಂಬಲದಿಂದ ” ಶ್ರೀ ಕಂಚಿಕಾಮಕೋಟಿ ವೇದ ವಿದ್ಯಾಲಯ- ಭಾರಧ್ವಾಜ ಆಶ್ರಮ ಎಂಬ ಹೆಸರಿನಲ್ಲಿ ಶ್ರೀ ಗಣೇಶ್ ಭಟ್ ಅಳಕೆ,ನೀರ್ಚಾಲು ಹಾಗೂ ಶ್ರೀ ರವಿಶಂಕರ್ ಭಾರದ್ವಾಜ್, ಸುಳ್ಯ (ಶ್ರೀ ಗಿರೀಶ್ ಭಾರದ್ವಾಜ್ ಅವರ ಸಹೋದರ) ಇವರು ಜಂಟಿಯಾಗಿ ಇಲ್ಲಿ ವೇದ ಪಾಠಶಾಲೆಯನ್ನು 24-05-2001ರಲ್ಲಿ ಪ್ರಾರಂಭಿಸಿ ಇಲ್ಲಿನ ವಿದ್ಯಾರ್ಥಿಗಳಿಗೆ ಅನ್ನ,ವಸನ ,ವಸತಿಗಳನ್ನು ನೀಡಿ ಪೂರ್ಣ ಉಚಿತವಾಗಿ ವೇದ ವಿದ್ಯೆಯನ್ನು ಧಾರೆಎರೆಯುತ್ತಿರುವ ಶ್ರೀ ಮಠದ ಸತ್ಕಾರ್ಯಕ್ಕೆ ಶ್ರೀ ರವಿಶಂಕರ್ ಭಾರದ್ವಾಜ್ ಸಹೋದರರು ಕೈಗೂಡಿಸಿದ್ದಲ್ಲದೆ ಪಾಠಶಾಲೆಯನ್ನು ತಮ್ಮ ಸ್ವಂತ ಜಾಗದಲ್ಲಿ ಕಟ್ಟಿಸಿಕೊಟ್ಟಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಮಚ್ಚಿನ ಗ್ರಾಮದ ಎರ್ಮುಂಜ ಮನೆಯ ಕೃಷಿಕರು ಹಾಗೂ ಖ್ಯಾತ ಸಾಹಿತಿಗಳಾದ ಪ. ಶ್ರೀ ರಾಮಕೃಷ್ಣ ಶಾಸ್ತ್ರಿ ಹಾಗೂ ಶ್ರೀಮತಿ ಶಾರದಾ ದಂಪತಿಗಳಿಗೆ 2ಗಂಡು , 1ಹೆಣ್ಣು ಮಕ್ಕಳು .ಮೊದಲನೆಯ ಮಗ ಶ್ರೀ ವೆಂಕಟೇಶ ಶಾಸ್ತ್ರಿ. ಎರಡನೆಯವರು ಶ್ರೀ ಲಕ್ಷ್ಮೀ ಮಚ್ಚಿನ ಉದಯವಾಣಿ ಪತ್ರಿಕೆಯ ವರದಿಗಾರರಾಗಿದ್ದಾರೆ.
ಶ್ರೀ ವೆಂಕಟೇಶ ಶಾಸ್ತ್ರಿಯವರು ಉಡುಪಿಯಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿ ಮಾಣಿ ವೇದಪಾಠಶಾಲೆಯಲ್ಲಿ 6 ವರ್ಷಗಳ ಕಾಲ ವೇದಾಧ್ಯಯನ ಮಾಡಿ ಮಣಿಮುಂಡ ಶ್ರೀ ಮಹಾಲಿಂಗ ಉಪಾಧ್ಯಾಯರಿಂದ ವೈದಿಕ ವಿಧ್ಯೆಯನ್ನು ಸಿಧ್ದಿಸಿಕೊಂಡು ,ಜೊತೆಗೆ ಸಂಸ್ಕೃತ ದಲ್ಲಿ ಸ್ನಾತಕೋತ್ತರ ಪದವೀಧರ ರಾಗಿ ವೇ/ಮೂ/ಶ್ರೀ ವೆಂಕಟೇಶ ಶಾಸ್ತ್ರಿಗಳು ಭಾರಧ್ವಾಜಾಶ್ರಮದಲ್ಲಿ ಪ್ರಾರಂಭದಿಂದಲೇ ಪ್ರಾಚಾರ್ಯರಾಗಿ ನೇಮಕಗೊಂಡವರು. ಈ ವೇದ ವಿದ್ಯಾಲಯದಲ್ಲಿ ಋಗ್ವೇದದ ಬೋಧನೆಯಲ್ಲಿ ಶ್ರೀ ರವಿಶಂಕರ್ ಭಾರಧ್ವಾಜರು ನಡೆಸಿಕೊಡುತ್ತಿದ್ದು,ಶ್ರೀ ಶಾಸ್ತ್ರಿಗಳು ಯಜುರ್ವೇದದ ಲ್ಲಿ ಪಾಠ ಪ್ರವಚನಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.
ಈ ಗುರುಕುಲದಲ್ಲಿ ಜಿಲ್ಲೆಯ ಎಲ್ಲೆಡೆಯಿಂದ ಅಲ್ಲದೆ, ಜಾರ್ಖಾಂಡ್ ,ತಮಿಳುನಾಡು, ಕೇರಳ, ಆಂಧ್ರಪ್ರದೇಶ ಗಳಿಂದಲೂ ವಿದ್ಯಾರ್ಥಿಗಳು ಬಂದು ಪೂರ್ಣ ಕಲಿಕೆಯ ಜೊತೆಗೆ ಚೌತಿಗೆ ಗಣಪತಿ ಹೋಮ ,ಪೌರ್ಣಮಿಗೆ ಪಾರಾಯಣ ಸಹಿತ ದುರ್ಗಾಪೂಜೆ ,ಪ್ರತಿ ಪಾಡ್ಯದಂದು ಧರ್ಮಾರಣ್ಯದಲ್ಲಿರುವ ಶ್ರೀ ರಾಘವೇಶ್ವರ ಭಾರತೀ ಯತೀಂದ್ರರ ಆಶ್ರಮದಲ್ಲಿ ಸಾನಿಧ್ಯ ವೃದ್ಧಿಗಾಗಿ ವೇದ ಪಾರಾಯಣ ವಟುಗಳೇ ನೆರವೇರಿಸಿಕೊಂಡು ಬರುತ್ತಿದ್ದಾರೆ.
ಅಳಿವಿನ ಅಂಚು ತಲಪುತ್ತಿರುವ ವೇದ ವಿದ್ಯೆಯ ಬಗ್ಗೆ ಸಮಾಜದಲ್ಲಿ ಆಸಕ್ತಿ ಮೂಡಿಸಿ,ಅದರ ಉಳಿವಿಗಾಗಿ ಶ್ರಮಿಸಬೇಕಾಗಿದೆ ಎಂದು ಶ್ರೀ ಶಾಸ್ತ್ರಿಗಳ ಮನದಾಳದ ಮಾತುಗಳು. ಈಗ 42 ನೇ ವಯಸ್ಸಿನ ,ಲವಲವಿಕೆಯಿಂದಿರುವ ಇವರು ಮಿತಭಾಷಿ, ಸದಾ ಹಸನ್ಮುಖಿ ,ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು ಎಂಬ ಮಾತು ಇವರಿಗೆ ಅನ್ವಯವಾಗಿದ್ದು, ಪತ್ನಿ ಶ್ರೀಮತಿ ವಿದ್ಯಾ ಹಾಗೂ 2ಮಕ್ಕಳನ್ನೊಳಗೊಂಡ ಪುಟ್ಟ ಸಂಸಾರ ವಾಗಿ ,ವೈದಿಕ ವಿದ್ಯೆಯನ್ನು ಸಿದ್ದಿಸಿಗೊಂಡು ನಾಡಿನೆಲ್ಲೆಡೆ ಪ್ರಸಿದ್ಧಿ ಗೊಂಡಿದ್ದಾರೆ…
ವೇದ ಬಲ್ಲವನಿಗೆ ಬೇಕು ವೇದಿಕೆ..
ವೇದಿಕೆಯಲ್ಲಿ ಇದ್ದವನಿಗೆ ಬೇಕು ವೇದ
ಇದು ವೇದಾಂತ…
ಫೋಟೋ & ಬರಹ : ಬಾಲು ದೇರಾಜೆ, ಸುಳ್ಯ