ಕರ್ನಾಟಕದಾದ್ಯಂತ ಸರಕಾರಿ ಶಾಲೆಗಳು ಮುಚ್ಚಲ್ಪಡುತ್ತಿವೆ. ಒಂದೆಡೆ ಆಂಗ್ಲ ಮಾಧ್ಯಮ ಶಾಲೆಗಳ ಮೊರೆ ಹೋಗುತ್ತಿರುವ ಹೆತ್ತವರು. ಇನ್ನೊಂದೆಡೆ ಸರ್ಕಾರಿ ಶಾಲೆಗಳಲ್ಲಿನ ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ಅಧ್ಯಾಪಕರ ಕೊರತೆಯೂ ಕಾಡುತ್ತಿರುತ್ತದೆ. ಈ ರೀತಿ ಸಮಸ್ಯೆಗಳ ಮೇಲೆ ಸಮಸ್ಯೆ ಅನುಭವಿಸಿ ಮುಚ್ಚಲ್ಪಟ್ಟ ಸರ್ಕಾರಿ ಶಾಲೆಗಳ ನಡುವೆ ಗ್ರಾಮೀಣ ಭಾಗದ ಶಾಲೆಯೊಂದು ಪ್ರಶಸ್ತಿಯನ್ನು ಪಡೆದು ಮಾದರಿಯೆನಿಸಿದೆ.
ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್, ಮುದ್ದೇನಹಳ್ಳಿ ಇದರ ಸಂಸ್ಥಾಪಕರಾದ ಸದ್ಗುರು ಶ್ರೀ ಮಧೀಸೂದನ ಸಾಯಿ ಅವರ 45ನೇ ವರ್ಷದ ಜನ್ಮ ದಿನಾಚರಣೆಯ ಅಂಗವಾಗಿ ಕರ್ನಾಟಕ ರಾಜ್ಯದ ಆಯ್ದ ಸರ್ಕಾರಿ ಶಾಲೆಗಳಿಗೆ ಕೊಡಲ್ಪಡುವ “ಹಸಿರು ನೈರ್ಮಲ್ಯ ಶಾಲಾ ಅಭ್ಯುದಯ ಪ್ರಶಸ್ತಿ” ಗೆ ಇರ್ದೆ-ಉಪ್ಪಳಿಗೆ ಸರ್ಕಾರಿ ಪ್ರೌಢಶಾಲೆ ಆಯ್ಕೆಯಾಗಿದೆ.
ಶಾಲಾ ಸ್ವಚ್ಛತೆ,ಹೂ ತೋಟ ಅಧ್ಯಯನ ನಡೆಸಿ ಪ್ರಶಸ್ತಿ ಘೋಷಣೆ
ಶಾಲೆಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಶಾಲಾ ಕೊಠಡಿಗಳು, ಆವರಣ, ಮೈದಾನ, ಶೌಚಾಲಯ ವ್ಯವಸ್ಥೆ, ಕಚೇರಿ, ಸ್ಮಾರ್ಟ್ ಕ್ಲಾಸ್, ಶಾಲಾ ಸ್ವಚ್ಛತೆ, ಪ್ರವೇಶದ್ವಾರ, ಕೈ ತೋಟ, ಹೂ ತೋಟ, ಅಕ್ಷರ ದಾಸೋಹ ಕೊಠಡಿ, ಶಾಲಾ ಆವರಣ, ಶಿಸ್ತು ಮತ್ತು ನೈರ್ಮಲ್ಯ, ಶಾಲಾ ಪರಿಸರ ಸ್ವಚ್ಛತೆ ಮೊದಲಾದವುಗಳ ಖುದ್ದು ಅಧ್ಯಯನ ನಡೆಸಿದ ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ಮುದ್ದೇನಹಳ್ಳಿಯ ತಂಡವು ಮೆಚ್ಚುಗೆಯೊಂದಿಗೆ ಪ್ರಶಸ್ತಿ ಘೋಷಣೆ ಮಾಡಿದ್ದಾರೆ.
ಗ್ರಾಮೀಣ ಭಾಗದ ಈ ಸರ್ಕಾರಿ ಪ್ರೌಢಶಾಲೆಯು ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಕಳೆದ ಒಂಭತ್ತು ವರ್ಷಗಳಿಂದ ಸತತ ಶೇಕಡಾ ನೂರರಷ್ಟು (100%) ಫಲಿತಾಂಶ ಪಡೆಯುತ್ತಿದೆ.
ಶ್ರೀ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರ
ಕರ್ನಾಟಕ ರಾಜ್ಯದಲ್ಲಿನ ಉತ್ತಮ 100 ಸರ್ಕಾರಿ ಶಾಲೆಗಳನ್ನು ಗುರುತಿಸಿ ಕೊಡುವ ಈ ಪ್ರಶಸ್ತಿಯ ಜೊತೆಯಲ್ಲಿ ತಲಾ ಹತ್ತು ಸಾವಿರ ರೂಪಾಯಿ ನಗದು ಪುರಸ್ಕಾರವೂ ಇದೆ. ಜುಲೈ 27ರಂದು ಮುದ್ದೇನಹಳ್ಳಿಯ ಶ್ರೀ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಲಾಗುವುದು ಎಂದು ಶಾಲಾ ಮುಖ್ಯ ಗುರುಗಳಾದ ಶ್ರೀಮತಿ ಅನ್ನಮ್ಮ ಪಿ ಎಸ್ ತಿಳಿಸಿದ್ದಾರೆ.
ಇದನ್ನೂ ಓದಿ: ಪಾಲಕ್ ಎಂಬ ಆರೋಗ್ಯ ಪಾಲಕ..