ಕರ್ನಾಟಕದಾದ್ಯಂತ ಈಗ ಸದ್ಧು ಮಾಡುತ್ತಿರುವುದು “ರೇಷನ್ ಕಾರ್ಡ್”. ಹೌದು ನಮ್ಮ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರು ಈಗಾಗಲೇ ಅಧಿಕಾರಿಗಳಿಗೆ ನೇರವಾಗಿ ೪೦ ಲಕ್ಷ ಬಿಪಿಎಲ್ ಕಾರ್ಡ್ಗಳನ್ನು ಅನರ್ಹಗೊಳಿಸುವಂತೆ ಆದೇಶ ನೀಡಿದ್ದಾರೆ.
ಬಿಪಿಎಲ್ ಕಾರ್ಡ್ ಫಲಾನುಭವಿಗಳಾಗಲು ಕೆಲವೊಂದು ಮಾನದಂಡಗಳಿದ್ದು ಅವುಗಳನ್ನೆಲ್ಲಾ ಅಲ್ಲಗಳೆದು ಬಡವರಿಗಾಗಿ ಇರುವ ಸರ್ಕಾರದ ಸೌಲಭ್ಯಗಳನ್ನು ಉಳ್ಳವರು ಪಡೆಯುತ್ತಿದ್ದಾರೆ.
ನೀತಿ ಆಯೋಗದ ವರದಿಯ ಪ್ರಕಾರ ನಮ್ಮ ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವವರ ಪ್ರಮಾಣ ಶೇ.೫.೬೭ರಷ್ಟಿರಬೇಕು. ಆದರೆ ಈ ಪ್ರಮಾಣ ರಾಜ್ಯದಲ್ಲಿ ಶೇ. ೮೦ ರಷ್ಟಿದೆ. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಅಂಕಿ ಅಂಶಗಳ ಪ್ರಕಾರ ಪ್ರಸ್ತುತ ರಾಜ್ಯದಲ್ಲಿ ೧.೨೭ ಕೋಟಿ ಬಿಪಿಎಲ್ ಕಾರ್ಡ್ ಚಾಲ್ತಿಯಲ್ಲಿದ್ದು ಲಕ್ಷಾಂತರ ಮಂದಿ ಅನರ್ಹರೂ ಬಿಪಿಎಲ್ ಫಲಾನುಭವಿಗಳಾಗಿರುವುದು ಬೇಸರದ ಸಂಗತಿ.
ಯಾರ್ಯಾರು ಬಿಪಿಎಲ್ ಕಾರ್ಡ್ ಪಡೆಯಲು ಅನರ್ಹರು?
೧. ೧.೨೦ ಲಕ್ಷ ಮೇಲ್ಪಟ್ಟು ವಾರ್ಷಿಕ ಆದಾಯ ಹೊಂದಿರುವವರು.
೨. ನಾಲ್ಕು ಚಕ್ರಗಳಿರುವ ವೈಟ್ ಬೋರ್ಡ್ ವಾಹನ ಹೊಂದಿರುವವರು.
೩. ಸರ್ಕಾರಿ ಅಥವಾ ಅರೆ ಸರ್ಕಾರಿ ನೌಕರರು
೪. ಗ್ರಾಮೀಣ ಪ್ರದೇಶದಲ್ಲಿ ಮೂರು ಎಕರೆ ಒಣಭೂಮಿ ಅಥವಾ ನೀರಾವರಿ ಭೂಮಿ ಹೊಂದಿರುವವರು.
೫. ನಗರ ಪ್ರದೇಶಗಳಲ್ಲಿ ೧೦೦೦ಚದರ ಅಡಿ ವಿಸ್ತೀರ್ಣದ ಮನೆ ಹೊಂದಿರುವವರು.
ಬಿಪಿಎಲ್ ಪಡಿತರ ಚೀಟಿಗೆ ಯಾಕೆ ಇಷ್ಟೊಂದು ಬೇಡಿಕೆ?
ಕರ್ನಾಟಕದಲ್ಲಿ ಬಿಪಿಎಲ್ ಪಡಿತರ ಚೀಟಿಗೆ ಹಲವಾರು ಸವಲತ್ತುಗಳಿದ್ದು ಇದರ ಪ್ರಯೋಜನ ಪಡೆಯುವ ಸಲುವಾಗಿ ಎಲ್ಲರೂ ಸುಳ್ಳು ದಾಖಲಾತಿ ನೀಡಿ ಅಥವಾ ಅಧಿಕಾರಿಗಳಿಗೆ ಲಂಚ ಕೊಟ್ಟು ಪಡಿತರ ಚೀಟಿ ಪಡೆದಿದ್ದಾರೆ. ಬಿಪಿಎಲ್ ಕಾರ್ಡುದಾರರಿಗೆ ಉಚಿತ ಅಕ್ಕಿ, ಅನ್ನಭಾಗ್ಯದ ಹಣ, ಕೃಷಿ ಇಲಾಖೆಗಳಲ್ಲಿ ದೊರೆಯುವ ಸಬ್ಸಿಡಿ, ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ, ಸರ್ಕಾರಿ ಉದ್ಯೋಗ, ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ, ವಸತಿ ಯೋಜನೆಯಡಿ ಸೌಲಭ್ಯಗಳನ್ನು ಪಡೆಯಲು ಎಲ್ಲರೂ ಬಿಪಿಎಲ್ ಕಾರ್ಡ್ ಫಲಾನುಭವಿಗಳಾಗಿದ್ದಾರೆ.
ಬಡವರಿಗೆ ಹಾಗೂ ಮಧ್ಯಮ ವರ್ಗದ ಜನರಿಗೆ ವರದಾನವಾಗಿದ್ದ ಬಿಪಿಎಲ್ ಕಾರ್ಡ್ ಉಳ್ಳವರ ಪಾಲಾಗಿದ್ದು ಈಗ ಹೆಚ್ಚಿನ ಸಂಖ್ಯೆಯಲ್ಲಿ ಈ ಪಡಿತರ ಚೀಟಿ ಎಪಿಎಲ್ ಕಾರ್ಡ್ ಆಗುವುದರಲ್ಲಿ ಸಂಶಯವಿಲ್ಲ. ಕಂದಾಯ ಇಲಾಖೆ, ಆರ್.ಟಿ.ಓ ಇಲಾಖೆ, ಆಹಾರ ಇಲಾಖೆ, ಐಟಿ ಇಲಾಖೆಗಳು ಒಟ್ಟಾಗಿ ಅನರ್ಹ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಗೊಳಿಸಲು ಯೋಜನೆ ರೂಪಿಸುತ್ತಿವೆ. ಏನೇ ಆಗಲಿ ಬಡವರು ಹಾಗೂ ಮಧ್ಯಮ ವರ್ಗದ ಜನರಿಗೆ ತೊಂದರೆ ಆಗದಂತೆ ಮಾನದಂಡಗಳನ್ನು ರೂಪಿಸಿ ಬಿಪಿಎಲ್ ಕಾರ್ಡ್ ಹಂಚಿಕೆಯಾಗಲಿ ಎಂಬುದೇ ಎಲ್ಲರ ಕೋರಿಕೆ.