ಮೂಲತಃ ಚಿಕ್ಕಮಗಳೂರಿನ ಪಂಚನಹಳ್ಳಿ ಗ್ರಾಮದವರಾದ ಅಪರ್ಣಾ ತಮ್ಮ ಸ್ವಚ್ಛಂದ ಕನ್ನಡ ನಿರೂಪಣೆಯ ಮೂಲಕವೇ ಇಡೀ ಕರುನಾಡ ಮನ ಗೆದ್ದವರು. ಎಲ್ಲಿ ಅಪರ್ಣಾ ಮಾತು ಆರಂಭಿಸುತ್ತಾರೋ ಅಲ್ಲಿ ಕನ್ನಡ ಪದಕೋಟಿ ಸುಲಲಿತವಾಗಿ ಮಾರ್ದನಿಸುತ್ತಿತ್ತು. ಕೇಳುಗರ ಕಿವಿ ಮತ್ತೆ ಮತ್ತೆ ಅವರ ಕಂಠಸಿರಿಯ ಮಾತುಗಳನ್ನು ಕೇಳಲು ಹಾತೊರೆಯುತ್ತಿತ್ತು. ನಮ್ಮ ಮೆಟ್ರೋದಲ್ಲಿ ಬರುವ ಮಾತುಗಳು ಕೂಡಾ ಅಪರ್ಣಾ ಅವರದ್ದೇ ಆಗಿದೆ. ರಾಜ್ಯ ಸರ್ಕಾರ ಪ್ರಾಯೋಜಿತ ಅನೇಕ ಕಾರ್ಯಕ್ರಮಗಳ ನಿರೂಪಣೆಯಲ್ಲಿ ಶ್ರೀ ಶಂಕರ ಪ್ರಕಾಶ್ ಅವರೊಂದಿಗೆ ಸೇರಿ ಅಪರ್ಣಾ ಕೂಡಾ ಧ್ವನಿಗೂಡಿಸಿದ್ದರು.
ಪುಟ್ಟಣ್ಣ ಕಣಗಾಲ್ ನಿರ್ದೇಶನ “ಮಸಣದ ಹೂವು” ಚಿತ್ರದ ಮೂಲಕ ೧೯೮೪ರಲ್ಲಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಇವರು ಸಂಗ್ರಾಮ, ಸಾಹಸ ವೀರ, ನಮ್ಮೂರ ರಾಜ, ಡಾಕ್ಟರ್ ಕೃಷ್ಣ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದರು. ಇತ್ತೀಚೆಗೆ ಕೊನೆಯದಾಗಿ ಬಣ್ಣ ಹಚ್ಚಿದ್ದು ಗ್ರೇ ಗೇಮ್ಸ್ ಎಂಬ ಚಿತ್ರದಲ್ಲಿ.
“ಮೂಡಲ ಮನೆ” ಧಾರಾವಾಹಿಯ ಮೂಲಕ ೨೦೦೩ರಲ್ಲಿ ಕಿರುತೆರೆಗೆ ಕಾಲಿಟ್ಟ ಅಪರ್ಣ ಟಿ ಎನ್ ಸೀತಾರಾಮ್ ಅವರ “ಮುಕ್ತ ಮುಕ್ತ” ಧಾರಾವಾಹಿಯಲ್ಲಿ ನಟಿಸಿ ಕನ್ನಡಿಗರ ಮನ ಗೆದ್ದಿದ್ದರು. ಬಿಗ್ ಬಾಸ್ ಕನ್ನಡ ಮೊದಲ ಆವೃತ್ತಿಯಲ್ಲಿ ಸ್ಪರ್ಧಿಯಾಗಿದ್ದ ಅಪರ್ಣಾ ಸೃಜನ್ ಲೋಕೇಶ್ ಅವರ ಮಜಾ ಟಾಕೀಸ್ ಕಾಮಿಡಿ ಶೋ ಅಲ್ಲಿ ವರಲಕ್ಷ್ಮಿಯಾಗಿ ಪಾತ್ರ ನಿರ್ವಹಿಸಿದ್ದು ವಿಶೇಷ. ನಗಿಸುವ ಕಲೆಯನ್ನೂ ಶುದ್ಧ ಕನ್ನಡ ಮಾತಾಡುತ್ತಲೇ ನಿರ್ವಹಿಸುತ್ತಿದ್ದುದು ಅಪರ್ಣಾ ಅವರು ವಿಶೇಷತೆಯಾಗಿತ್ತು.
ಕಳಚಿದ ಕರುನಾಡ ಕಂಠಸಿರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಚಲನಚಿತ್ರ ರಂಗದ ಪ್ರಮುಖರು ಸಂತಾಪ ಸೂಚಿಸಿ ಅಂತಿಮ ನಮನ ಸಲ್ಲಿಸಿದ್ದಾರೆ. ಅಪರ್ಣಾ ಸ್ವ ಗೃಹದಲ್ಲಿ ಅಂತಿಮ ದರ್ಶನ ಮುಗಿದ ಬಳಿಕ ಬನಶಂಕರಿಯ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.