ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತರಿಗೆ ಉಪಯೋಗವಾಗಲೆಂದು ರಾಜ್ಯ ಸರ್ಕಾರವು ಕೃಷಿ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡುತ್ತಿದೆ. ಈಗ ಈ ಪಂಪ್ ಸೆಟ್ ಗಳ ಆರ್ ಆರ್ ಸಂಖ್ಯೆಗೆ ಆಧಾರ್ ನಂಬರ್ ಲಿಂಕ್ ಮಾಡಲು ಎಸ್ಕಾಂ ಸೂಚಿಸಿದೆ.
ಕೃಷಿ ಪಂಪ್ ಸೆಟ್ ಗಳಿಗೆ ಆಧಾರ್ ಲಿಂಕ್ ಯಾಕೆ?
ರಾಜ್ಯ ಸರ್ಕಾರವು ಪ್ರತೀ ವರ್ಷ ಎಸ್ಕಾಂಗೆ ಉಚಿತವಾಗಿ ಕೃಷಿಗಾಗಿ ಬಳಸಲಾಗುತ್ತಿರುವ ವಿದ್ಯುತ್ ಶುಲ್ಕಗಳನ್ನು ನೀಡುತ್ತಿದೆ. ಇದನ್ನು ಪರಿಶೀಲನೆ ಮಾಡಲು ಆರ್ ಆರ್ ಸಂಖ್ಯೆಗೆ ಆಧಾರ್ ನಂಬರ್ ಲಿಂಕ್ ಆಗಲೇ ಬೇಕು. ಅಲ್ಲದೆ ರಾಜ್ಯದಲ್ಲಿ ಅಕ್ರಮವಾಗಿ ಹಲವು ಪಂಪ್ ಸೆಟ್ ಗಳ ಬಳಕೆಯಾಗುತ್ತಿದ್ದು ಒಬ್ಬರ ಹೆಸರಿನಲ್ಲಿ ಆರೇಳು ಪಂಪ್ ಸೆಟ್ಗಗಳಿವೆ ಎಂಬ ಮಾಹಿತಿಯೂ ಇದೆ. ಈ ಎಲ್ಲಾ ಅಕ್ರಮ ಪಂಪ್ ಸೆಟ್ಗಗಳಿಗೆ ಕಡಿವಾಣ ಹಾಕಲು ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಸರ್ಕಾರದಿಂದ ಸಿಗುವ ಸಬ್ಸಿಡಿ ಅರ್ಹ ಕೃಷಿಕರಿಗೆ ಸಿಗುತ್ತಿದೆಯೇ ಎಂಬುದನ್ನು ಪರಿಶೀಲಿಸಲು ಇದು ಸಹಾಯಕವಾಗುತ್ತದೆ.
ರಾಜ್ಯದಲ್ಲಿ 34.17 ಲಕ್ಷ ರೈತರು ಕೃಷಿ ಪಂಪ್ಸೆಟ್ಗಳಿಗೆ ರಾಜ್ಯ ಸರ್ಕಾರದ ಉಚಿತ ವಿದ್ಯುತ್ ಯೋಜನೆ ಪ್ರಯೋಜನ ಪಡೆಯುತ್ತಿದ್ದಾರೆ.
ಇದಕ್ಕಾಗಿ ಸರ್ಕಾರ ಎಸ್ಕಾಂಗಳಿಗೆ 10 ರಿಂದ 11 ಕೋಟಿಯನ್ನು ಪಾವತಿ ಮಾಡುತ್ತಿದೆ. ಅಕ್ರಮವಾಗಿ ಪಂಪ್ಸೆಟ್ಗಳಿಗೆ ವಿದ್ಯುತ್ ಸಂಪರ್ಕ ಪಡೆದಿರುವುದು ಪತ್ತೆ ಹಚ್ಚಲು ಆಧಾರ್ ಲಿಂಕ್ ಮಾಡಲಾಗುತ್ತಿದೆ ಎಂಬುದು ಸದ್ಯದ ಮಾಹಿತಿ.
ಎಲ್ಲಿ ಆಧಾರ್ ಲಿಂಕ್ ಮಾಡಿಸಬೇಕು?
ಕೃಷಿಕರು ತಮ್ಮ ಆಧಾರ್ ಕಾರ್ಡ್ ಹಾಗೂ ಕೃಷಿ ಪಂಪ್ ಸೆಟ್ ಆರ್ ಆರ್ ಸಂಖ್ಯೆಯ ಮಾಹಿತಿಯನ್ನು ತಮ್ಮ ವಲಯಕ್ಕೆ ಸಂಬಂಧಿಸಿದ ಎಸ್ಕಾಂ ಲೈನ್ ಮ್ಯಾನ್ ಅವರನ್ನು ಭೇಟಿಯಾದರೆ ಅವರೇ ಲಿಂಕ್ ಮಾಡಿಕೊಡುತ್ತಾರೆ. ಇಲ್ಲದಿದ್ದರೆ ಹತ್ತಿರದ ವಿದ್ಯುತ್ ಶಾಖಾ ಕಚೇರಿ ಅಥವಾ ಉಪ ವಿಭಾಗ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು.
ವಿದ್ಯುತ್ ಸರಬರಾಜು ಕಂಪನಿಗಳು ಸೂಚನೆಯನ್ನು ನೀಡುತ್ತಿವೆ. ಆದರೆ ಹೀಗೆ ಆಧಾರ್ ಲಿಂಕ್ ಮಾಡಲು ಯಾವುದೇ ಅಂತಿಮ ದಿನಾಂಕವನ್ನು ನಿಗದಿ ಮಾಡಿಲ್ಲ.
ನೀರಾವರಿ ಪಂಪ್ಸೆಟ್ ಹೊಂದಿರುವ ಗ್ರಾಹಕರು ಸಮೀಪದ ಮೆಸ್ಕಾಂ ಉಪವಿಭಾಗ ಕಛೇರಿಯನ್ನು ಸಂಪರ್ಕಿಸಿ ಆಧಾರ್ ಜೋಡಣೆ ಮಾಡಬೇಕಾಗಿ ತಿಳಿಸಲಾಗುತ್ತಿದೆ.
ರೈತರ ಪ್ರತಿಕ್ರಿಯೆ ?
ಕೃಷಿ ಚಟುವಟಿಕೆಗಳಿಗೆ ಸರ್ಕಾರ ಅನುಕೂಲ ಮಾಡಿಕೊಡಲು ಕೃಷಿ ಪಂಪ್ಸೆಟ್ಗಳಿಗೆ ಉಚಿತವಾಗಿ ವಿದ್ಯುತ್ ಪೂರೈಕೆ ಮಾಡುತ್ತಿದೆ. ಮೀಟರ್ ಅಳವಡಿಕೆ ಮಾಡಲು ಆಧಾರ್ ಲಿಂಕ್ ಮಾಡಲು ಕೇಳುತ್ತಿರುವುದು ಏಕೆ? ಎಂಬುದು ರೈತರ ಪ್ರತಿಕ್ರಿಯೆಯಾಗಿದೆ.