“25 ಜೂನ್, 1975 ಸ್ವತಂತ್ರ ಭಾರತದ ಇತಿಹಾಸದ ಕರಾಳ ದಿನ. ಪ್ರಜಾಪ್ರಭುತ್ವ ದೇಶದಲ್ಲಿ ತುರ್ತು ಪರಿಸ್ಥಿತಿ ಯನ್ನು ಘೋಷಿಸಿ ಸರ್ವಾಧಿಕಾರಿ ಆಡಳಿತ ನಡೆಸಿ, ಸರ್ಕಾರದ ವಿರುದ್ಧ ಮಾತನಾಡಿದ ಎಲ್ಲರನ್ನೂ ಜೈಲಿಗಟ್ಟಿದ್ದರು. ಆ ಸಂದರ್ಭ ಭಾರತದ ಪ್ರಜಾಪ್ರಭುತ್ವದ ಆತ್ಮಕ್ಕೆ ಕುತ್ತು ತಂದು ಲಕ್ಷಕ್ಕೂ ಅಧಿಕ ಹೋರಾಟಗಾರರನ್ನು, ಅವರು ತಪ್ಪು ಇಲ್ಲದಿದ್ದರೂ ಜೈಲಿಗಿಟ್ಟಿದ್ದಲ್ಲದೇ ಮಾಧ್ಯಮಗಳನ್ನೂ ಕಟ್ಟಿ ಹಾಕಿದ್ದರು. ಹಾಗಾಗಿ ಆ ಹೋರಾಟಗಾರರ ತ್ಯಾಗವನ್ನು ನೆನಪಿಸಿಕೊಳ್ಳಲು ಭಾರತ ಸರ್ಕಾರ ಜೂನ್ 25ರಂದು “ಸಂವಿಧಾನ್ ಹತ್ಯಾ ದಿವಸ್” ಎಂದು ಗುರುತಿಸಿಕೊಳ್ಳಲಿದೆ ಎಂದು ಜುಲೈ 12 2024 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಎಕ್ಸ್ ಪೋಸ್ಟ್ ಮೂಲಕ ಘೋಷಿಸಿದ್ದಾರೆ. ಹಾಗಾದರೆ 1975 ನಲ್ಲಿ ಏನಾಗಿತ್ತು? ಅದನ್ನು ಏಕೆ ಕರಾಳದಿನ ಎಂದು ಕರೆಯುತ್ತಾರೆ ಎಂದು ನಾವು ತಿಳಿಯಬೇಕಾಗಿದೆ.
ಅದು 1973. ಭಾರತ-ಪಾಕಿಸ್ತಾನ ಯುದ್ಧ ಕೊನೆಗೊಂಡ ಸಮಯ. ಆಗ ಸರ್ಕಾರಕ್ಕೆ, ಅಧಿಕಾರಿಗಳಿಗೆ ಉಗ್ರರಿಂದ ಬೆದರಿಕೆ ಕರೆಗಳು ಬರಲಾರಂಭಿಸಿದವು. ಅದೇ ಸಮಯದಲ್ಲಿ ತೈಲ ಬಿಕ್ಕಟ್ಟಿನ ಕಾರಣದಿಂದ ದೇಶದ ಆರ್ಥಿಕ ಪರಿಸ್ಥಿತಿಯೂ ಹದಗೆಟ್ಟಿತ್ತು. ಹೀಗೆ ವಿವಿಧ ಕಾರಣಗಳಿಂದ ಭಾರತದಲ್ಲಿ ಸತತವಾಗಿ ಮುಷ್ಕರಗಳು, ಪ್ರತಿಭಟನೆಗಳು ನಡೆಯುತ್ತಿದ್ದವ. ಇದು ನಿಯಂತ್ರಣ ಮೀರಿ ಹೋಗಿತ್ತು. ಅದಲ್ಲದೇ ಆಡಳಿತ ಕಾಂಗ್ರಸ್ ಪಕ್ಷದಲ್ಲೂ ಆಂತರಿಕ ಭಿನ್ನಮತ ಭುಗಿಲೆದ್ದಿತ್ತು. ಇದನ್ನೆಲ್ಲ ಕಂಡು ಬಂಗಾಳದ ಆಗಿನ ಮುಖ್ಯಮಂತ್ರಿ ಸಿದ್ಧಾರ್ಥ ಶಂಕರ್, ಆಂತರಿಕ ತುರ್ತು ಪರಿಸ್ಥಿತಿ ಹೇರುವಂತೆ ಪ್ರಧಾನಿಗೆ ಮನವಿ ಮಾಡಿಕೊಂಡರು. ಪ್ರಧಾನಿ ಇಂದಿರಾ ಗಾಂಧಿ, ಇದನ್ನು ರಾಷ್ಟ್ರಪತಿಗಳ ಮುಂದಿಟ್ಟರು.
ಇದನ್ನೂ ಓದಿ: X ನಲ್ಲಿ ಜಾಗತಿಕ ನಾಯಕನಾಗುವ ಮೂಲಕ ಪ್ರಧಾನಿ ಮೋದಿ ಹೊಸ ಮೈಲಿಗಲ್ಲು
ಭಾರತದ ಆಗಿನ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್ ಅವರು ಜೂನ್ 25 1975 ರಂದು ಪ್ರಧಾನಿಯ ಸಲಹೆಯಂತೆ 6 ತಿಂಗಳ “ತುರ್ತು ಪರಿಸ್ಥಿತಿ”ಯನ್ನು ಘೋಷಿಸಿದರು. 1977ರಲ್ಲಿ ಚುನಾವಣೆ ಘೋಷಣೆ ಆಗುವವರೆಗೂ, ಆದರೆ ಪ್ರತಿ 6 ತಿಂಗಳಿಗೊಮ್ಮೆ ತುರ್ತು ಪರಿಸ್ಥಿತಿಯನ್ನು ಮುಂದುವರೆಸಲಾಯಿತು. ಪ್ರಜಾಪ್ರಭುತ್ವ ದೇಶದಲ್ಲಿ ಸಾಂವಿಧಾನಿಕವಾಗಿಯೇ ಹೇಗೆ ಸ್ವಾತಂತ್ರ್ಯವನ್ನು ನಾಶ ಮಾಡಬಹುದು ಎಂಬುದನ್ನು ಆ 2 ವರ್ಷಗಳ ಆಡಳಿತ ತೋರಿಸುತ್ತದೆ.
ಭಾರತೀಯ ಸಂವಿಧಾನದ 352 ಮತ್ತು 356ನೇ ವಿಧಿಗಳನ್ನು ಬಳಸಿ, ಆಡಳಿತ ಸರ್ಕಾರದ ರಾಜಕೀಯ ವಿರೋಧಗಳೆಲ್ಲರ ವಿರುದ್ಧ ಕಠಿನಣ ಕ್ರಮಕೈಗೊಂಡ ಪ್ರಧಾನಿ ಇಂದಿರಾ ಗಾಂಧಿ, ಪ್ರತಿಭಟನಾಕಾರರನ್ನು ಮತ್ತು ಮುಷ್ಕರದ ನಾಯಕರನ್ನು ಬಂಧಿಸುವಂತೆ ಪೋಲೀಸರಿಗೆ ತಾಕೀತು ಮಾಡಿದರು. ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ ನಾಯಕರಾದ ಜಯಪ್ರಕಾಶ್ ನಾರಾಯಣ್, ಮುಲಾಯಂ ಸಿಂಗ್, ಮೊರಾರ್ಜಿ ದೇಸಾಯಿ, ಅಟಲ್ ಬಿಹಾರಿ ವಾಜಪೇಯಿ, ಎಲ್. ಕೆ. ಅಡ್ವಾಣಿ ಮುಂತಾದವರನ್ನು ಬಂಧಿಸಲಾಯಿತು. ರಾಜಕೀಯ ಪಕ್ಷಗಳೊಂದಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಜಮಾತ್- ಎ -ಇಸ್ಲಾಮಿ ಅಂತಹ ಸಂಘಟನೆಗಳ ಮೇಲೆ ನಿಷೇಧ ಹೇರಲಾಯಿತು. ಇವರ ಜೊತೆಗೆ, ಸಂವಿಧಾನ ತಿದ್ದುಪಡಿಯನ್ನು ವಿರೋಧಿಸಿದ ಕಾಂಗ್ರೆಸ್ ನಾಯಕರಾದ ಮೋಹನ್ ಕರಿಯ ಮತ್ತು ಚಂದ್ರಶೇಖರ್ ಅವರಿಂದ ರಾಜೀನಾಮೆ ಪಡೆದು, ನಂತರ ಅವರನ್ನೂ ಬಂಧಿಸಲಾಯಿತು.
ಭಾರತದ ಎಂಐಎಸ್ಎ, ಡಿಎಸ್ಐಆರ್ ಮತ್ತು ಸಿಓಎಫ್ಎಫ್ ಪಿಓಎಸ್ಎ ಎಂಬ ಕಾನೂನುಗಳ ಅಡಿಯಲ್ಲಿ, ತುರ್ತು ಪರಿಸ್ಥಿತಿಯ ಸಂದರ್ಭ, 1 ಲಕ್ಷಕ್ಕೂ ಅಧಿಕ ಜನರನ್ನು ಬಂಧಿಸಲಾಗಿತ್ತು..
ಇದನ್ನೂ ಓದಿ: ರಾಂಚಿ ಆರ್ ಎಸ್ ಎಸ್ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ಬೈಠಕ್ ಆರಂಭ
ತುರ್ತು ಪರಿಸ್ಥಿತಿ ತೆರಿಗೆ ನೀತಿಯಲ್ಲಿ ಬದಲಾವಣೆ
ತುರ್ತು ಪರಿಸ್ಥಿತಿಯು ಭಾರತದ ತೆರಿಗೆ ನೀತಿ ನಿಯಮಗಳಲ್ಲಿ ಬಹಳಷ್ಟು ಬದಲಾವಣೆಗಳನ್ನು ತಂದಿತು. ಆರರಿಂದ ಹದಿನೈದು ಸಾವಿರ ರೂಪಾಯಿಗಳ ನಡುವೆ ವಾರ್ಷಿಕ ಆದಾಯ ಗಳಿಸುವವರಿಗೆ ಕೇಂದ್ರ ಸರ್ಕಾರ ತೆರಿಗೆ ವಿನಾಯತಿ ನೀಡಿತು. ಇನ್ನು ಆದಾಯ ತೆರಿಗೆಯನ್ನು 8% ರಿಂದ 2.5% ಕ್ಕೆ ಇಳಿಸಲಾಯಿತು. ಇದೆಲ್ಲವುದರ ಪರಿಣಾಮದಿಂದಾಗಿ ಸರ್ಕಾರಕ್ಕೆ 400 ಮಿಲಿಯನ್ ಅಂದರೆ 40 ಕೋಟಿ ರೂಪಾಯಿಯಷ್ಟು ಆದಾಯ ನಷ್ಟವಾಯಿತು. ಇದನ್ನು ಸರಿದೂಗಿಸಲು ಶಿಕ್ಷಣ ಮತ್ತು ಸಾಮಾಜಿಕ ಕಲ್ಯಾಣ ಇಲಾಖೆಯ ಖರ್ಚನ್ನು ಇಂದಿರಾಗಾಂಧಿಯವರು ಕಡಿತಗೊಳಿಸಿದರು.
ತೆರಿಗೆ ನಿಯಮಗಳು ಬದಲಾಗುತ್ತಿದ್ದಂತೆ ವಸ್ತುಗಳ ಬೆಲೆಯನ್ನು ನಿಯಂತ್ರಣ ಮಾಡಲು ಸರ್ಕಾರ ಮುಂದಾಯಿತು. ಸರ್ಕಾರದ ಈ ನಿರ್ಧಾರವು, ಜನರಿಂದ ಭಾರಿ ಬೆಂಬಲ ಪಡೆಯಿತು. ಆದರೆ ಆರ್ಬಿಐ ನೀತಿ ಹಾಗೂ ಅನೇಕ ಕಾರಣಗಳಿಂದಾಗಿ, ಆಹಾರ ಧಾನ್ಯಗಳ ಬೆಲೆ ಏರುಪೇರುಗೊಂಡು ಬೆಲೆಗಳು ಕುಸಿತಕ್ಕೆ ಕಾರಣವಾಯಿತು. ಇದಕ್ಕೆ ಸರಿಯಾಗಿ ಧಾನ್ಯಗಳ ಆಮದು ಹೆಚ್ಚಾಯಿತು. ಅದೇ ಸಮಯದಲ್ಲಿ ಕಾರ್ಮಿಕರ ವೇತನ ಮತ್ತು ಬೋನಸ್ ಗಳನ್ನು ಕಡಿತಗೊಳಿಸಲಾಯಿತು. ಈ ಬೆಲೆಕಡಿತ ಮಾರ್ಚ್ 1976ರವರೆಗೆ ಜಾರಿಯಲ್ಲಿತ್ತು. ಆದರೆ ನಂತರದಲ್ಲಿ ಎಲ್ಲಾ ಸರಕುಗಳ ಬೆಲೆಗಳು ಮತ್ತೆ ಏರಲು ಪ್ರಾರಂಭವಾಯಿತು. ಸರ್ಕಾರದ ವಿರುದ್ಧ ಪ್ರತಿಭಟಿಸಿದವರನ್ನೆಲ್ಲ ಬಂಧಿಸಲಾಯಿತು. ಜನವರಿ 1976ರಲ್ಲಿ ಪ್ರತಿಭಟನಾ ನಿರತ 30,000 – 40,000 ಕಾರ್ಮಿಕರನ್ನು ಬಂಧಿಸುವ ಮೂಲಕ ರಾಜ್ಯವು ಬಿಸಿ ಮುಟ್ಟಿಸಿತ್ತು.
ಅದೇ ವರ್ಷ ಸರ್ಕಾರವು 20% ಬೋನಸ್ ಭರವಸೆಯನ್ನು ಕೇವಲ 8% ಗೆ ಕಡಿತಗೊಳಿಸಿದಾಗ, ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್ ನ 8000 ಕಾರ್ಮಿಕರು ಶಾಂತಿಯುತ ಧರಣಿಯಲ್ಲಿ ಪಾಲ್ಗೊಂಡಿದ್ದರು. ಇವರ ಮೇಲೆ ಪೊಲೀಸರು ಲಾಠಿ ಪ್ರಯೋಗ ನಡೆಸಿ, ಸಾವಿರಾರು ಮಂದಿಯನ್ನು ಬಂಧಿಸಿದರು. ಕಲ್ಲಿದ್ದಲು ಗಣಿಗಾರರು ಕಡಿಮೆ ವೇತನದೊಂದಿಗೆ ಬಹಳ ಕಷ್ಟ ಮತ್ತು ಅಪಾಯಕಾರಿ ಸ್ಥಿತಿಯಲ್ಲಿ ಕೆಲಸ ಮಾಡಲು ಒತ್ತಾಯಿಸಲ್ಪಟ್ಟರು. ಅಪಾಯದ ಬಗ್ಗೆ ದೂರುಗಳನ್ನು ನೀಡಿದರೂ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸದ ಕಾರಣ, ಧನ್ಬಾದ್ ಬಳಿಯ ಚಸ್ನಾಲ ಕಲ್ಲಿದ್ದಲು ಗಣಿಯಲ್ಲಿ 375 ಜನರು ಸಾವನ್ನಪ್ಪಿದ್ದರು. ಇದು ಭಾರತದ ಇತಿಹಾಸದಲ್ಲಿ ನಡೆದ ಅತ್ಯಂತ ಭೀಕರವಾದ ಗಣಿಗಾರಿಕೆ ದುರಂತವಾಗಿದೆ.
ಇದನ್ನೂ ಓದಿ: 13 ದಿನಗಳಲ್ಲಿ ಸುಮಾರು 2.66 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳಿಂದ ಅಮರನಾಥ ಯಾತ್ರೆ
1977ರಲ್ಲಿ ಚುನಾವಣೆ
18 ಜನವರಿ 1977 ರಂದು, ಕೇಂದ್ರ ಸರ್ಕಾರ ಹೊಸ ಚುನಾವಣೆಗೆ ಕರೆ ನೀಡಿ, ಬಂಧನದಲ್ಲಿದ್ದ ವಿರೋಧ ಪಕ್ಷದ ನಾಯಕರನ್ನು ಜೈಲಿನಿಂದ ಬಿಡುಗಡೆ ಮಾಡಿದರು; 21 ಮಾರ್ಚ್ 1977 ರಂದು ತುರ್ತು ಪರಿಸ್ಥಿತಿಯು ಅಧಿಕೃತವಾಗಿ ಕೊನೆಗೊಂಡು, ಇಂದಿರಾ ಗಾಂಧಿ ನೇತೃತ್ವದ ಸರ್ಕಾರ ಅಧಿಕಾರವನ್ನು ತೊರೆದರೂ, ಅನೇಕರು ಜೈಲಿನಲ್ಲಿಯೇ ಇದ್ದರು. 1977ರ ಚುನಾವಣೆ, ʻಪ್ರಜಾಪ್ರಭುತ್ಮ ಮತ್ತು ಸರ್ವಾಧಿಕಾರʼ ದ ನಡುವಿನ ಹೋರಾಟ ಎಂದು ವಿರೋಧ ಪಕ್ಷಗಳು ಬಿಂಬಿಸಿದವು.
1977 ರ ಭಾರತೀಯ ಸಾರ್ವತ್ರಿಕ ಚುನಾವಣೆಯು ಮಾರ್ಚ್ 16 ರಿಂದ 20 ರವರೆಗೆ ನಡೆಯಿತು, ಮತ್ತು ಜನತಾ ಪಕ್ಷಭಾರಿ ಜಯಗಳಿಸಿತು. ಜನತಾ ಪಕ್ಷವು ಲೋಕಸಭೆಯಲ್ಲಿ 298 ಸ್ಥಾನಗಳನ್ನು ಪಡೆದುಕೊಂಡರೆ, ಆಡಳಿತಾರೂಢ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕೇವಲ 154 ಸೀಟುಗಳನ್ನು ಪಡೆಯಲು ಸಾಧ್ಯವಾಯಿತು. ಸ್ವತಃ ಇಂದಿರಾ ಗಾಂಧಿಯವರು ತಮ್ಮ ರಾಯ್ ಬರೇಲಿ ಕ್ಷೇತ್ರದಲ್ಲಿಯೇ ಸೋತರು. ತಮ್ಮ ಪ್ರತಿಸ್ಪರ್ಧಿ ರಾಜ್ ನಾರಾಯಣ್ 55,000 ಮತಗಳ ಅಂತರದಿಂದ ಪ್ರಧಾನಿಯನ್ನು ಸೋಲಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿಗಳು ಬಿಹಾರ ಮತ್ತು ಉತ್ತರ ಪ್ರದೇಶದಂತಹ ದೊಡ್ಡ ರಾಜ್ಯಗಳಲ್ಲ ಒಂದು ಸ್ಥಾನವನ್ನು ಗೆಲ್ಲಲೂ ವಿಫಲರಾದರು.
ಜನತಾ ಪಾರ್ಟಿಯು, ರಾಜಕೀಯ ಮಿತ್ರಪಕ್ಷಗಳೊಂದಿಗೆ ಮೈತ್ರಿ ಮಾಡಿ, ಹೆಚ್ಚುವರಿ 47 ಸೀಟುಗಳನ್ನು ಪಡೆಯಿತು. ಆ ಮೂಲಕ ಮೈತ್ರಿ ಪಕ್ಷವು ಲೋಕಸಭೆಯಲ್ಲಿ ಮೂರನೇ ಎರಡರಷ್ಟು ಸೀಟುಗಳನ್ನು ಪಡೆಯುವಲ್ಲಿ ಸಫಲರಾಗಿ, ಪ್ರಧಾನಿ ಪಟ್ಟವನ್ನೂ ಪಡೆಯಿತು. ಮೊರಾರ್ಜಿ ದೇಸಾಯಿ ಅವರು ಸ್ವತಂತ್ರ ಭಾರತದ ಮೊದಲ ಕಾಂಗ್ರೆಸ್ಸೇತರ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ತುರ್ತು ಪರಿಸ್ಥಿತಿ ಘೋಷಣೆ ಆದ ದಿನಗಳ ಒಂದು ಸಣ್ಣ ತುಣುಕು ಇದು. ಸುಮಾರು 2 ವರ್ಷಗಳ ಕಾಲ ಪ್ರಜಾಪ್ರಭುತ್ವ ದೇಶದಲ್ಲಿ ಸರ್ವಾಧಿಕಾರೀ ಧೋರಣೆ ನಿಜವಾಗಿಯೂ ಯಾವ ರೀತಿಯಲ್ಲಿ ಇತ್ತು ಎಂಬುವುದು ಅಂದು ಅನುಭವಿಸಿದವರಿಗೇ ಗೊತ್ತು! ಅದನ್ನು ಊಹಿಸಲೂ ಅಸಾಧ್ಯ!
ಬರಹ : ತರುಣ್ ಶರಣ್