ಪಂಚಗವ್ಯ ಹಾಗೂ ಗೋವಿನ ಮಹತ್ವವನ್ನು ತಿಳಿಸುವ ಪದ್ಮಪುರಾಣ
ಮಹಾಭಾರತ ಹಾಗೂ ರಾಮಾಯಣ ಮತ್ತು ಪುರಾಣಗಳಲ್ಲಿ ಗೋವಿನ ಮಹತ್ವವನ್ನು ಪ್ರತಿ ಸಂದರ್ಭದಲ್ಲೂ ಹೇಳಲಾಗಿದೆ. ಹಾಗಾಗಿ ಎಲ್ಲಾ ದಾನಕ್ಕಿಂತ ಗೋದಾನ ಶ್ರೇಷ್ಠ ಹಾಗೂ ಹಿಂದಿನ ರಾಜರುಗಳು ರಾಜ್ಯಕ್ಕೆ ಯಾವುದೇ ಸಮಸ್ಯೆ ಬಂದಾಗ ಗೋದಾನ ಮಾಡಿ ಪರಿಹಾರಿಸಿಕೊಳ್ಳುತ್ತಿದ್ದರು.ಪಂಚಗವ್ಯದ ಮಹತ್ವವನ್ನು ವಿವಿಧ ಪುರಾಣಗಳಂತೆ ಪದ್ಮ ಪುರಾಣವು ವಿಶಿಷ್ಟವಾಗಿ ವರ್ಣಿಸಿದೆ.
ಈ ಗವ್ಯಗಳು (ಗೋವಿನಿಂದ ಉಪ್ಪನ್ನಗೊಂಡ 5 ವಸ್ತುಗಳು) ಮಿಕ್ಕ ದ್ರವ್ಯಗಳ ಜೊತೆಗೆ ಹೋಲಿಸಿದಲ್ಲಿ ಹೆಚ್ಚು ಶ್ರೇಷ್ಠ. ಶುಭಕರ ಮತ್ತು ಆ ಕಾರಣದಿಂದ ಜನಪ್ರಿಯ ಎಂಬ ಮಾತನ್ನು ಹೇಳುತ್ತಾರೆ. “ಯಾರಿಗೆ ಗೋವಿನ ಹಾಲು,ಮೊಸರು,ತುಪ್ಪಗಳನ್ನು ತಿನ್ನುವ ಸೌಭಾಗ್ಯ ದೊರೆಯದೋ, ಆತನ ಶರೀರ ಮಲ ಸಮಾನವಾಗುವುದು. ಮಾನವನು ತಿಂದ ಅನ್ನ ದ ಪ್ರಭಾವ 5 ರಾತ್ರಿಗಳವರೆಗೆ, ಆದರೆ ಆತ ಸೇವಿಸಿದ ಹಾಲಿನ ಪ್ರಭಾವ ಏಳು ರಾತ್ರಿಯವರೆಗೆ, ಮೊಸರಿನ ಪ್ರಭಾವ ಇಪತ್ತು ರಾತ್ರಿಯವರೆಗೆ ಮತ್ತು ತುಪ್ಪದ ಪ್ರಭಾವ ತಿಂಗಳವರೆಗೂ ಶರೀರದಲ್ಲಿರುತ್ತದೆ.” ಎಂದು ಉಲ್ಲೇಖಿಸಲಾಗಿದೆ.
ಈ ವಿವರಣೆಯಲ್ಲಿರುವ ಲೌಕಿಕ, ವೈಜ್ಞಾನಿಕ ಪ್ರಯೋಜನವನ್ನು ಗಮನಿಸಬೇಕು. ಹಾಲು,ಮೊಸರು, ತುಪ್ಪ ಒಂದಕ್ಕಿಂತ ಒಂದು ಅಧಿಕವಾಗಿ ಪೌಷ್ಟಿಕ ಎಂಬ ಮಾತನ್ನು ಇಂದಿನ ವಿಜ್ಞಾನವು ಸಮರ್ಥಿಸುತ್ತದೆ. ಆದರೆ ಪುರಾಣವು ಈ ವಿವಿಧ ಗವ್ಯಗಳು ಶರೀರದಲ್ಲಿ ಎಷ್ಟು ಕಾಲ ತಮ್ಮ ಪ್ರಭಾವ ತೋರಿಸುತ್ತವೆ ಎಂಬುದನ್ನು ಸೂಚಿಸುತ್ತದೆ.
ಇನ್ನೊಂದು ಮಾತು ಪುರಾಣದಲ್ಲಿ ಬರುತ್ತದೆ.”ಯಾರು ಒಂದು ತಿಂಗಳಿಗೂ ಹೆಚ್ಚಾಗಿ ಗವ್ಯಪದಾರ್ಥಗಳಿಲ್ಲದ ಆಹಾರವನ್ನು ಸೇವಿಸುವನೋ ಆತನ ಭೋಜನದಲ್ಲಿ ಪ್ರೇತಗಳಿಗೆ ಭಾಗ ದೊರೆಯುತ್ತಿರುತ್ತದೆ. ಆದ್ದರಿಂದಲೇ ಯುಗಯುಗಗಳಿಂದ ಎಲ್ಲಾ ಕಾರ್ಯಗಳನ್ನು ಗೋವಿಗೆ ಪ್ರಾಶಸ್ತ್ಯವೀಯಲಾಗಿದೆ. ಗೋವು ಎಲ್ಲಾ ಕಾಲಕ್ಕೂ ಮನುಷ್ಯರಿಗೆ ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥಗಳನ್ನು ಕರುಣಿಸುವುದು”.
ಹಾಗಾಗಿ ನಾಲ್ಕೂ ಪುರುಷಾರ್ಥಗಳ ಸಾಧನೆಗೆ ಅನಿವಾರ್ಯ ಮತ್ತು ಅತ್ಯಗತ್ಯ.
ಗಾವೋ ಮಮಾಗ್ರತೋ ನಿತ್ಯಂ ಗಾವ: ಪೃಷ್ಠತ ಏವ ಚ|
ಗಾವಶ್ಚ ಸರ್ವಗಾತ್ರೇಷು ಗವಾಂ ಮಧ್ಯೇ ವಸಾಮ್ಯಹಮ್||
ಈ ಪುರಾಣದ ಕರ್ತೃ ಋಷಿ ಹೇಳುತ್ತಾನೆ.”ಗೋವುಗಳು ಸದಾ ನನ್ನ ಮುಂದೆ ಇರಲಿ ನನ್ನ ಹಿಂದೆಯೂ ಇರಲಿ ನನ್ನ ಅಂಗಾಂಗಗಳಿಗೆ ಗೋವಿನ ಸ್ಪರ್ಶಾನುಗ್ರಹ ಆಗುತ್ತಿರಲಿ. ನಾನು ಗೋವುಗಳ ನಡುವೆಯೇ ವಾಸಿಸುವಂತಾಗಲಿ” ಎಂಬ ಈ ವಾಕ್ಯ ನಮ್ಮ ಆಶಯವು ಹೌದು ನಾವೆಲ್ಲ ಗೋವಿನ ಮಧ್ಯೆ ವಾಸಿಸೋಣ. ಗೋವುಗಳನ್ನು ಸಾಕಿ ಆರೋಗ್ಯವಂತರಾಗಿ ಬದುಕಿನಲ್ಲಿ ಸಂತೋಷ ಕಾಣುಣೋ.